ಭಟ್ಕಳ, ಜನವರಿ 18: ಎರೆಡು ದಿನಗಳ ಕಾಲ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಸುಮಾರು ಇಪ್ಪತ್ತೆಂಟು ತಂಡಗಳು ಪೈಪೋಟಿ ನಡೆಸಿ ನೆರೆದ ಕ್ರೀಡಾಭಿಮಾನಿಗಳಿಗೆ ರಂಜನೆ ಒದಗಿಸಿದವು.
ಅತ್ಯಂತ ರೋಚಕ ಅಂತಿಮ ಪಂದ್ಯದಲ್ಲಿ ಕುಮಟಾ ತಂಡವನ್ನು 24 ಅಂಕಗಳೊಡನೆ ಸೋಲಿಸಿದ ಪರಶುರಾಮ ತಂಡ ಅರ್ಹ ಜಯ ಗಳಿಸಿತು.

ಈ ಪಂದ್ಯಾವಳಿಯನ್ನು ಭಟ್ಕಳ ತಾಲ್ಲೂಕು ಕಬಡ್ಡಿ ಫೆಡರೇಶನ್ ಆಯೋಜಿಸಿ ಕ್ರೀಡೆಯ ಮೂಲಕ ಬಾಂಧವ್ಯವನ್ನು ಬೆಸೆಯಲು ನೂತನ ಕ್ರಮ ಕೈಗೊಂಡಿತ್ತು. ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿ ಹೊನಲು ಬೆಳಕಿನಲ್ಲಿ ನಡೆಸಿದ ಪಂದ್ಯಾಟವನ್ನು ವೀಕ್ಷಿಸಲು ಜಿಲ್ಲೆಯಾದ್ಯಂತದಿಂದ ಅಭಿಮಾನಿಗಳು ಆಗಮಿಸಿ ಭ್ರಾತೃತ್ವ ಮೆರೆದರು.
ಪ್ರಥಮ ಸ್ಥಾನ ಪಡೆದ ಪರಶುರಾಮ ತಂಡ ರೂ. ೧೫ ಸಾವಿರ ನಗದು ಬಹುಮಾನ ಹಾಗೂ ಪಾರೀತೋಷಕ, ಎರಡನೆಯ ಸ್ಥಾನ ಪಡೆದ ಕುಮಟಾ ತಂಡ ಹತ್ತು ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಭಟ್ಕಳ ಕಟ್ಟುವೀರ ತಂಡಕ್ಕೆ ಏಳು ಸಾವಿರ ರೂ. ಹಾಗೂ ನಾಲ್ಕನೆಯ ಸ್ಥಾನ ಪಡೆದ ಶಿವಶಕ್ತಿ ಹೊನ್ನಾವರ ತಂಡಗಳಿಗೆ ಐದು ಸಾವಿರ ರೂ. ನಗದು ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.



ಅತ್ಯುತ್ತಮ ಆರ್ ರೌಂಡ್ ಆಟಗಾರನಾಗಿ ಪರಶುರಾಮ ಭಟ್ಕಳ ತಂಡದ ಮನೋಜ್ ನಾಯಕ್ ಆಯ್ಕೆಯಾದರು. ಕಟ್ಟುವೀರ ತಂಡದ ನಾಗರಾಜ್ ಅತ್ಯುತ್ತಮ ರೈಡರ್ ಪ್ರಶಸ್ತಿಗೆ ಪಾತ್ರರಾದರೆ ಬೆಸ್ಟ್ ಕ್ಯಾಚರ್ ಆಗಿ ಕುಮಟಾ ತಂಡದ ಹರ್ಷ ಆಯ್ಕೆಯಾದರು.
ಪಂದ್ಯಾವಳಿಯನ್ನು ವೀಕ್ಷಿಸಲು ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ನಿವೇದಿತ್ ಆಳ್ವ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು. ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷರಾದ ಸೂರಜ್ ನಾಯಕ್ ಸೋನಿ, ಉದ್ಯಮಿ ಸಾಯಿನಾಥ್ ಗಾಂವ್ಕರ್, ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಕಾರ್ಯದರ್ಶಿ ಸಂದೀಪ್ ನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ರಾಮ ಮೊಗೇರ, ಚಿತ್ರ ನಿರ್ಮಾಪಕ ಡಾ. ಅನಿಲ್ ಕುಮಾರ್, ತಾಲ್ಲೂಕು ಕಬಡ್ಡಿ ಫೆಡರೇಶನ್ ಅಧ್ಯಕ್ಷ ಇಮ್ತಿಯಾಜ್ ಉದ್ಯಾವರ್, ರಾಜ್ಯ ಮಟ್ಟದ ಕಬಡ್ಡಿ ಆಟಗಾರ ಇನಾಯತುಲ್ಲಾ ಶಾಬಂದರೀ, ಭಟ್ಕಳ ಕೌಂಸೆಲರ್ ಕೃಷ್ಣ ನಾಯಕ್, ಇರ್ಶಾದ್ ಗವಾಯಿ ಸಹಿತ ಹಲವು ಗಣ್ಯರು ಪಂದ್ಯಾವಳಿಯಲ್ಲಿ ಉಪಸ್ಥಿತರಿದ್ದರು.
ಭಟ್ಕಳ ಮುನಿಸಿಪಾಲಿಟಿ ಅಧ್ಯಕ್ಷರಾದ ಶ್ರೀ ಕಾಶಿಂಜೀ ಪರ್ವೇಜ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಚಿತ್ರ, ವರದಿ: ಸಾಹಿಲ್ ಪ್ರತಿನಿಧಿ, ಭಟ್ಕಳ.